ವೃಂದಾವನ ವ್ಯಕ್ತಿಚಿತ್ರಗಳು(ರೋಹಿತ್ ಚಕ್ರತೀರ್ಥ) - Vrudavana Vyakathachitragalu(Rohit Chakratirtha)
- ₹120
ಕ್ರಿಸ್ತಪೂರ್ವ ಐದನೇ ಶತಮಾನ. ರೋಮನ್ ಸಾಮ್ರಾಜ್ಯ ಶತ್ರುಗಳ ದಾಳಿಗೆ ಸಿಕ್ಕಿ ನಾಮಾವಶೇಷವಾಗುವ ಪರಿಸ್ಥಿತಿ ಬಂದೊದಗಿತು. ರಾಜಧಾನಿಯೇನೋ ಇತ್ತು, ಆದರೆ ಸೈನಿಕರಲ್ಲಿ ಧೈರ್ಯ-ಸ್ಥೈರ್ಯಗಳನ್ನು ಬಡಿದೆಬ್ಬಿಸಿ ಯುದ್ಧಕ್ಕೆ ಅಣಿಗೊಳಿಸಿ ಶತ್ರುಗಳನ್ನು ಸದೆಬಡಿಯಬಲ್ಲ ಧೀಮಂತರು ಯಾರೂ ಇರಲಿಲ್ಲ. ಹಾಗಂತ ಕೈ ಕಟ್ಟಿ ಸುಮ್ಮನಿರಲಾದೀತೇ? ಶತಾಯಗತಾಯ ಮಾತೃಭೂಮಿಯನ್ನು ಉಳಿಸಿಕೊಳ್ಳಲೇಬೇಕಿತ್ತು. ಊರಿನ ಪ್ರಾಜ್ಞರೆಲ್ಲರೂ ಒಟ್ಟಾಗಿ ಸಿನ್ಸಿನಾಟಸ್ ಬಳಿ ಬಂದರು. ಯುದ್ಧದ ನೇತೃತ್ವ ವಹಿಸಿಕೊಳ್ಳಬೇಕೆಂದು ಕೈ ಮುಗಿದು ಬೇಡಿಕೊಂಡರು. ಯಾರ, ಯಾವುದರ ರಗಳೆಯೂ ಬೇಡವೆಂದು ಹಳ್ಳಿಯಲ್ಲಿ ಗದ್ದೆ-ತೋಟ ನೋಡಿಕೊಂಡಿದ್ದ ವೃದ್ಧ ಕೃಷಿಕನ ಬಳಿ ಇಡೀ ರೋಮ್ ಸಾಮ್ರಾಜ್ಯ ಮಂಡಿಯೂರಿ ಕೂತಿದೆ! ಯೋಚಿಸುವುದಕ್ಕೆ ಹೆಚ್ಚು ಸಮಯವಿಲ್ಲ! ಸಿನ್ಸಿನಾಟಸ್ ಹಾರೆ ಗುದ್ದಲಿ ಬದಿಗೆಸೆದು ಖಡ್ಗವೆತ್ತಿದ. ಜನರಿಗೆ ಧೈರ್ಯ ತುಂಬಿದ. ಸೈನಿಕರನ್ನು ಒಗ್ಗೂಡಿಸಿದ. ಯುದ್ಧತಂತ್ರ ಹೆಣೆದ. ಹಗಲಿರುಳು ಬೆವರು ಬಸಿದು ಕೊನೆಗೂ ಶತ್ರುಗಳನ್ನು ಸೋಲಿಸುವಲ್ಲಿ ಯಶಸ್ವಿಯಾದ. ರೋಮ್ ಸಾಮ್ರಾಜ್ಯ ಉಳಿಯಿತು. ಶತ್ರುಗಳು ದಿಕ್ಕಾಪಾಲಾದರು. ಸಹಸ್ರಾರು ಜೀವಗಳು ಉಳಿದವು. ದೇಶವನ್ನು ಶತ್ರುಗಳ ಭಯದಿಂದ ಪಾರುಮಾಡಿದ ವೀರಸೇನಾನಿ, ದೇಶವು ತನಗೊಪ್ಪಿಸಿದ ಕೆಲಸವನ್ನು ಮಾಡಿ ಮುಗಿಸಿಯಾಯಿತು ಎಂದು ಹೇಳಿ ಖಡ್ಗ-ಗುರಾಣಿಗಳನ್ನು ಕೆಳಗಿಟ್ಟು ತನ್ನ ಹಳ್ಳಿಗೆ ಹೋಗಿ ಮತ್ತೆ ಕೃಷಿ ಕೆಲಸವನ್ನು ಕೈಗೆತ್ತಿಕೊಂಡ! ಸಿನ್ಸಿನಾಟಸ್ ಈಗಿಲ್ಲ ನಿಜ. ಆದರೆ ಅವನ ಹೆಸರು ಹೊತ್ತು ನಿಂತಿದೆ ಇಂದಿಗೂ ಅಮೆರಿಕದಲ್ಲಿ - ಸಿನ್ಸಿನಾಟಿ ನಗರ.
"ವೃಂದಾವನ" ಕೃತಿಯ ಪುಟಗಳಲ್ಲಿ ಸಿಗುವುದು ಇಂಥ ವ್ಯಕ್ತಿತ್ವಗಳೇ. ಕಾಲೇಜು ಶಿಕ್ಷಣ ಪಡೆದು ಯಾವುದಾದರೂ ದೊಡ್ಡ ಉದ್ಯೋಗ ಹಿಡಿದು ತನ್ನ ಮಗ ಲಕ್ಷಾಂತರ ರುಪಾಯಿ ಸಂಪಾದಿಸಬೇಕೆಂದು ತಂದೆ ಅತ್ತ ಹಂಬಲಿಸುತ್ತಿದ್ದರೆ ಇತ್ತ ಸದ್ದಿಲ್ಲದೆ ಸಂನ್ಯಾಸಿಯಾಗಿಬಿಟ್ಟ ಸಿದ್ಧಗಂಗಾ ಶ್ರೀಗಳು, ರಾಜ್ಯವನ್ನೇ ಆಳುವ ಸುವರ್ಣ ಅವಕಾಶ ಬಂದರೂ ಅದನ್ನು ರಾಜವಂಶಕ್ಕೇ ಮರಳಿಸಿದ ವ್ಯಾಸರಾಯರು, ಔಷಧದ ಪೊಟ್ಟಣದಲ್ಲಿ ಬಂದ ಬಂಗಾಳಿ ಬರೆಹವೇ ಕಾರಣವಾಗಿ ಆ ಭಾಷೆ ಕಲಿತು ಹತ್ತಾರು ಕಾದಂಬರಿಗಳನ್ನು ಕನ್ನಡಕ್ಕೆ ತಂದ ವೆಂಕಟಾಚಾರ್ಯರು, ಕಾಡುತ್ತಿರುವ ಅನಾರೋಗ್ಯದಿಂದ ಮುಕ್ತನಾಗಬೇಕೆಂಬ ಆಸೆಯಲ್ಲಿ ಕಠೋರ ಭಾವನಿಂದ ಯೋಗವನ್ನು ಒಲಿಸಿಕೊಂಡ ಅಯ್ಯಂಗಾರರು... ಒಂದಷ್ಟು ಕೆಲಸ ಮಾಡಲಿಕ್ಕಿದೆ ಎಂಬ ಸ್ಪಷ್ಟ ನಿರ್ದೇಶನವನ್ನು ಬೆನ್ನಿಗೆ ಕಟ್ಟಿಕೊಂಡೇ ಈ ಜಗತ್ತಿನಲ್ಲಿ ಹುಟ್ಟಿದಂಥ ಈ ವ್ಯಕ್ತಿಗಳ ಬದುಕಿನ ಕತೆಗಳು ನಮ್ಮ ಮುಂದಿರುವ ಕತ್ತಲೆಯನ್ನು ಹೊಡೆದೋಡಿಸಬಲ್ಲ ಸ್ಫೂರ್ತಿದೀಪಗಳು. "ವಿಶ್ವವಾಣಿ" ಪತ್ರಿಕೆಯಲ್ಲಿ ಪ್ರತಿ ಮಂಗಳವಾರ ಪ್ರಕಟವಾಗುತ್ತಿದ್ದ "ಚಕ್ರವ್ಯೂಹ" ಅಂಕಣದಲ್ಲಿ ಬರೆದ ಅಂತಹ ವ್ಯಕ್ತಿಚಿತ್ರಗಳನ್ನು ಒಟ್ಟಾಗಿಸಿ ರೋಹಿತ್ ಚಕ್ರತೀರ್ಥ ಇದೀಗ "ವೃಂದಾವನ" ಹೆಸರಲ್ಲಿ ಕನ್ನಡ ಓದುಗರ ಮುಂದೆ ಇಟ್ಟಿದ್ದಾರೆ.
ಕುಮಾರವ್ಯಾಸ, ಲೀಲಾಶುಕರಂಥ ಕ್ಲಾಸಿಕ್ ಕವಿಗಳು, ಸಂಸ, ಟಿ.ಪಿ. ಕೈಲಾಸಂರಂಥ ಕನ್ನಡ ಅರುಣೋದಯ ಕಾಲದ ನಾಟಕಕಾರರು, ಸಿರಿಗನ್ನಡಂ ಗೆಲ್ಗೆ ಎಂಬ ಘೋಷವಾಕ್ಯವನ್ನು ಕನ್ನಡಿಗರಿಗೆ ಕೊಟ್ಟ ರಾ.ಹ. ದೇಶಪಾಂಡೆ, "ಮೈಸೂರು ಸ್ಯಾಂಡಲ್ ಸೋಪ್" ಮೂಲಕ ನೂರು ವರ್ಷಗಳ ಹಿಂದೆಯೇ ಆತ್ಮನಿರ್ಭರ ಭಾರತಕ್ಕೆ ಮುನ್ನುಡಿ ಇಟ್ಟ ಸೋಸಲೆ ಗರಳಪುರಿ ಶಾಸ್ತ್ರಿಗಳು, ದೇಶ ಕಟ್ಟಿದ ಒಡೆಯರುಗಳಾದ ಚಾಮರಾಜೇಂದ್ರ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್, ಸಿದ್ಧಗಂಗೆಯ ಕಾಯಕಯೋಗಿ ಕರ್ನಾಟಕರತ್ನ ಶ್ರೀ ಶಿವಕುಮಾರ ಸ್ವಾಮಿಗಳು, ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರರು, ಸಂನ್ಯಾಸಿಯಾಗಿದ್ದೂ ರಾಜಕಾರಣದ ಅಧಿಕಾರ ದಂಡ ಹಿಡಿಯಬೇಕಾಗಿ ಬಂದ ಶ್ರೀ ವ್ಯಾಸರಾಯರು, ರಾಜಕಾರಣದಲ್ಲಿದ್ದೂ ಸಂತನಂತೆ ಬದುಕಿಹೋದ ಪಿ.ವಿ. ನರಸಿಂಹರಾಯರು... ಇವರೆಲ್ಲರೂ ಇದ್ದಾರೆ "ವೃಂದಾವನ"ದೊಳಗೆ.
"ವೃಂದಾವನ" ಸತ್ತವರ ಕತೆಗಳಲ್ಲ. ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರುಗಳನ್ನು ಶಾಶ್ವತವಾಗಿ ಕೆತ್ತಿದವರ ಕತೆಗಳು.
Reviews
There are no reviews for this product.