ಗಂಧದ ಮಾಲೆ ವ್ಯಕ್ತಿಚಿತ್ರಗಳು(ರೋಹಿತ್ ಚಕ್ರತೀರ್ಥ) - Gandada Maale(Rohit Chakratirtha)
- ₹120
ಅವನಿಗೆ ಕ್ಯಾನ್ಸರ್ ಆಗಿತ್ತು. ಬದುಕಿದರೆ ಆರು ತಿಂಗಳು ಅಷ್ಟೆ ಎಂದರು ವೈದ್ಯರು. ಆರು ತಿಂಗಳೇ? ಬೇಕಾದಷ್ಟಾಯಿತು! ಎಂದ ಅವನು. ನಾಲ್ಕು ಟೈಮ್ಜೋನ್ಗಳಷ್ಟು ವಿಸ್ತಾರಕ್ಕೆ ಹರಡಿಕೊಂಡಿರುವ ದೇಶದ ಪೂರ್ವದಿಂದ ಪಶ್ಚಿಮದವರೆಗೆ ಮ್ಯಾರಥಾನ್ ಓಡಿಬಿಟ್ಟ ಆ ಪುಣ್ಯಾತ್ಮ!
ಆಕೆಯ ಮೇಲೆ ಐವತ್ತಾರು ಬರ್ಬರ ಗಾಯಗಳಾಗಿದ್ದವು. ಚಾಕುವಿನ ಬರೆ, ರಕ್ತದ ಕೋಡಿ, ಎಂದೆಂದೂ ಮಾಯದ ಆಳವಾದ ಗೀರು. ವಿರೂಪವಾದ್ದಕ್ಕೆ ಕೊರಗುತ್ತ ಕತ್ತಲೆ ಕೋಣೆಯಲ್ಲಿ ಬದುಕು ಮುಗಿಸುವ ಬದಲು ಆಕೆ ಜಗತ್ತಿಗೆಲ್ಲ ಮುಖ ತೋರುವ ಗಟ್ಟಿ ನಿರ್ಧಾರ ಮಾಡಿದಳು. ರಾಜಮಹಾರಾಜರೇ ಈಕೆಯ ಗಾಯನವನ್ನು ಕಿವಿ ತುಂಬಿಸಿಕೊಳ್ಳಬೇಕೆಂದು ಕಾತರಿಸುವಂಥ ಮಹಾನ್ ಗಾಯಕಿಯಾಗಿಬಿಟ್ಟಳು! ಗಾಯದ ನೋವನ್ನು ಗಾಯನದಲ್ಲಿ ಮರೆತಳು!
ಇದ್ದೊಬ್ಬ ಪತಿಯಿಂದ ದೂರವಾಗಿ, ಮೈಯನ್ನೇ ಮುಳುಗಿಸುವಷ್ಟು ಸಾಲ ಮಾಡಿಕೊಂಡು ಹೈರಾಣಾದವಳು ಕೇವಲ ಐವತ್ತು ಪೈಸೆಯ ರೀಫಿಲ್ಲನ್ನು ನಂಬಿಕೊಂಡು ಕೋಟ್ಯಂತರ ರುಪಾಯಿಗಳ ಸಾಮ್ರಾಜ್ಯ ಕಟ್ಟಿದ ಕತೆ, ಊಟಕ್ಕಿಲ್ಲದೆ ಕೊನೆಗೆ ತನ್ನ ನಾಯಿಯನ್ನೂ ದುಡ್ಡಿಗೆ ಮಾರಾಟ ಮಾಡಿದ ಕಲಾವಿದ ಹಾಲಿವುಡ್ನ ಹೆಸರಾಂತ ನಟನಾಗಿ ಬದುಕು ಬಂಗಾರ ಮಾಡಿಕೊಂಡ ಕತೆ, ವಿಚ್ಛೇದನವೆಂಬ ಕಂಗಾಲು ಘಟನೆಯನ್ನೇ ತನ್ನ ಬದುಕಿಗೆ ತಿರುವು ಕೊಡುವ ಅವಕಾಶವನ್ನಾಗಿ ಪರಿವರ್ತಿಸಿಕೊಂಡವನ ಕತೆ... ಹೀಗೆ ಈ ಹೊತ್ತಗೆಯ ಪುಟ ಪುಟದಲ್ಲೂ ಸ್ಫೂರ್ತಿದೇವತೆಗಳ ತೋರಣ.
"ಗಂಧದ ಮಾಲೆಯನ್ನು ಪರಿಮಳದಲ್ಲಿ ಮಾಡುತ್ತಾರೆ" - ಎಂಬುದು ಹತ್ತು ವರ್ಷದ ಎಳೆ ಹುಡುಗ ಪೂರ್ಣಪ್ರಜ್ಞ ಬರೆದ ಕವಿತೆಯ ಸಾಲು. ಆ ಹುಡುಗ ಈಗ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಆತನ ಕವಿತೆಗಳು "ಗಂಧದ ಮಾಲೆ" ಕೃತಿಯಲ್ಲಿ ಬಂದಿವೆ, ಆತನ ವ್ಯಕ್ತಿ ಪರಿಚಯದ ಜೊತೆ. ಈ ಕೃತಿಯಲ್ಲಿ ರಾಕ್ಷಸ ಸರಕಾರಗಳ ಕೈಯಲ್ಲಿ ನಲುಗಿ ನರಕದ ಅನುಭವವನ್ನು ಕಂಡುಂಡು ಬಂದವರ ದಾರುಣ ಕತೆಗಳಿವೆ, ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಸಿಕೊಂಡೂ ಬದುಕನ್ನು ಅಸಹನೀಯವಾಗಿಸಿಕೊಂಡವರ ದುಃಖದ ಕತೆಗಳೂ ಇವೆ. ಮಹಾತ್ಮರಾಗಲು ಬೇಕಾದ ಚೈತನ್ಯ ಅಂತಸ್ಥವಾಗಿರುವವರು ಜಗತ್ತಿನ ಪ್ರತಿಯೊಬ್ಬರೂ. ಆದರೆ ನಿಜಕ್ಕೂ ಮಹಾತ್ಮರ ಸಾಲಿಗೇರುವ ಮಂದಿ ಬೆರಳೆಣಿಕೆಯಷ್ಟೆ! ಯಾಕೆ ಹಾಗೆ? ಈ ಹೊತ್ತಗೆಯ ಕತೆಗಳಲ್ಲಿ ಅದಕ್ಕೆ ಉತ್ತರ ಸಿಗಬಹುದೇನೋ ಓದುಗರಿಗೆ.
Reviews
There are no reviews for this product.