ಕೈಲಾಸಂರ ಮಾತು, ಜೀವನದಲ್ಲಿ ನಡೆಯೋ ಘಟನೆಗಳನ್ನ ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನವನ್ನೇ ವಕ್ರದೃಷ್ಟಿಯಿಂದ ನೋಡಿದರೆ ಆಧ್ಯಾತ್ಮ ಹುಟ್ಟುತ್ತೆ... “ನಗ್ತಾ ನಲಿ ಅಳ್ತಾ ಕಲಿ" ಈ ಮಾತನ್ನು ನೆನಪಿಸುತ್ತೆ. ಪ್ರಾಣೇಶರ ಪಂಚುಗಳು ಅವು ಹಾಸ್ಯವೇ ಆಗಿರಲಿ, ಜೀವನ ದರ್ಶನವೇ ಆಗಿರಲಿ, ಅವರಿಗೆ ದಕ್ಕಿರುವುದು ಅವರ ಜೀವನಾನುಭವ, ಪರಿಸರ ಮತ್ತು ದೇಶವಿದೇಶಗಳ ಸುತ್ತಾಟಗಳಿಂದ.ಹಾಗೆ ಕಲಿತ ಪಾಠಗಳನ್ನು ಪಾಕ ಮಾಡಿ, ಭಟ್ಟಿ ಇಳಿಸಿಕೊಂಡು ಗುಳಿಗೆ ಗುಳಿಗೆಯಾಗಿ ತಮ್ಮ ಹಾಸ್ಯಕಾರ್ಯಕ್ರಮಗಳ ಮೂಲಕ ಮತ್ತು ಲೇಖನಗಳ ಮೂಲಕ ಹಂಚಿಕೊಂಡು ತಾನು ಸವಿದ ಸವಿಯನ್ನು ಇತರರಿಗೂ ಹಂಚುವ ಕೈಂಕರ್ಯ ಹುಬ್ಬೇರಿಸುತ್ತದೆ.“ನೋಡಿದ್ದು ನೆನಪಿರುವುದಿಲ್ಲ, ಕೇಳಿದ್ದು ಕರುಳಿಗೆ ತಟ್ಟುತ್ತದೆ."“ಪ್ರಶ್ನೆಗೆ ಉತ್ತರ ಯಾರನ್ನೂ ಕೇಳಬಾರದು; ಹುಡುಕಿಕೊಳ್ಳಬೇಕು."“ಕಾಲಿಗೆ ಮೆಟ್ಟಿಲ್ಲದಿದ್ದರೂ, ಕೈನಲ್ಲಿರೋ ಮೊಬೈಲಿಗೆ ನೆಟ್ ಇಲ್ಲವೆಂದು ಮುಳ್ಳಿನ ಹಾದಿಯಲ್ಲಿ ನಡೆಯುವವರು"“ನಗ್ತಾ ನಲಿ ಅಳ್ತಾ ಕಲಿ" ಕೃತಿಯಲ್ಲಿ ಬರುವ ಇಂತಹ ಅನೇಕ ಮಾತುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ನಗುವೇ ಅಂತಿಮವಲ್ಲ ಮಗುವೇ, ನಗುವಿನ ನಂತರದ ಚಿಂತನೆ ಮುಖ್ಯ ಎಂಬ ಸಂದೇಶವನ್ನು ವಾಚ್ಯವಾಗಲ್ಲದೆ ಸೂಚ್ಯವಾಗಿ ತಿಳಿಸುವ ಕೃತಿ...